ಯಕ್ಷಗಾನದಿಂದ ಪುರಾಣ ಪರಿಚಯದ ಮಹತ್ಕಾರ್ಯ: ಪೇಜಾವರ ಶ್ರೀ
ಲೇಖಕರು : ಉದಯವಾಣಿ
ಸೋಮವಾರ, ನವ೦ಬರ್ 23 , 2015
|
ತನ್ನ ವೈಶಿಷ್ಟ್ಯ ಸೌಂದರ್ಯದಿಂದಾಗಿ ವಿಶೇಷ ಮನ್ನಣೆ ಪಡೆದಿರುವ ಯಕ್ಷಗಾನ ಕಲೆ ಪುರಾಣವನ್ನು ಪರಿಚಯಿಸುವ ಮಹತ್ತರ ಕೆಲಸವನ್ನು ಕೂಡ ಮಾಡುತ್ತಿದೆ. ಇದು ಯಕ್ಷಗಾನದಿಂದ ಆಗುವ ದೊಡ್ಡ ಲಾಭ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ವತಿಯಿಂದ ನೀಡಲಾಗುವ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಯಕ್ಷಗಾನ ಕಲೆ ಒಂದು ದೊಡ್ಡ ಕನ್ನಡಿ. ಕನ್ನಡಿಯಲ್ಲಿ ಪ್ರತಿಬಿಂಬವಾಗಬೇಕಾದರೆ ಅದರು ಎದುರು ವ್ಯಕ್ತಿ ಅಥವಾ ವಸ್ತುಗಳಿರಬೇಕು. ಆದರೆ ಯಕ್ಷಗಾನವೆಂಬ ಕನ್ನಡಿಯ ಎದುರಿಗೆ ಪುರಾಣದ ವ್ಯಕ್ತಿಗಳು ಇಲ್ಲವಾದರೂ ಅವರ ಪ್ರತಿಬಿಂಬ ಮೂಡುತ್ತದೆ. ಇಂದು ಸಿನೆಮಾ, ನಾಟಕಗಳಲ್ಲಿ ಪೌರಾಣಿಕ ಕಥೆ, ಚಿತ್ರಣ ಕ್ಷೀಣಿಸುತ್ತಿದೆ. ಆದರೆ ಯಕ್ಷಗಾನದಲ್ಲಿ ಪೌರಾಣಿಕ ಶ್ರೀಮಂತಿಕೆ ಇದೆ. ಇಂತಹ ಕಲೆ ಮತ್ತಷ್ಟು ಬೆಳೆದು ಜನರಿಗೆ ಪಾಠ, ಸಂತಸ ನೀಡುತ್ತಿಬೇಕು. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಯಕ್ಷಗಾನ ಕಲಾರಂಗ ಆದರ್ಶ ಕೆಲಸ ಮಾಡುತ್ತಿದೆ ಎಂದು ಶ್ರೀಗಳು ಹೇಳಿದರು.
ಈ ವರ್ಷದ ಪ್ರಶಸ್ತಿ ಪುರಸ್ಕೃತರು
- ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಶಿವರಾಮ ಶೆಟ್ಟಿ
- ಡಾ. ಬಿ. ವಿ. ಆಚಾರ್ಯ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ವೆಂಕಪ್ಪ ಅಮೀನ್
- ನಿಟ್ಟೂರು ಸುಂದರಶೆಟ್ಟಿ-ಮಹೇಶ್ ಡಿ. ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಕೆ. ಚಂದ್ರಶೇಖರ ಭಟ್
- ಬಿ. ಜಗಜ್ಜೀನದಾಸ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಎಚ್. ಟಿ. ಚಂದ್ರಶೇಖರ ಆಚಾರ್
- ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಸಸ್ತಿ’- ಜೆಪ್ಪು ದಯಾನಂದ ಶೆಟ್ಟಿ
- ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಕೊಳ್ತಿಗೆ ನಾರಾಯಣ ಗೌಡ
- ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಶಂಕರ ಭಾಗವತ ಯಲ್ಲಾಪುರ
- ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ – ಭಾಗವತ ವಾದಿರಾಜ ಹೆಬ್ಬಾರ ಸ್ಮರಣಾರ್ಥ
- ಶಿರಿಯಾರ ಮಂಜು ನಾಯಕ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ತೀರ್ಥಹಳ್ಳಿ ಗೋಪಾಲ ಆಚಾರ್ಯ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ಎಚ್. ಸರ್ವೋತ್ತಮ ಗಾಣಿಗ
- ಕೋಟ ವೈಕುಂಠ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’- ಗಾವಳಿ ಶೀನ ಕುಲಾಲ
- ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ ’ – ದಾಸನಡ್ಕ ರಾಮ ಕುಲಾಲ
- ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ವೆಂಕಟರಮಣ ಕಾಸರಗೋಡು
- ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ಪೂಕಳ ಲಕ್ಷ್ಮೀನಾರಾಯಣ ಭಟ್
- ಐರೋಡಿ ರಾಮ ಗಾಣಿಗ ಗೌರವಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ಕುರಿಯ ಗಣಪತಿ ಶಾಸ್ತ್ರಿ
- ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ಶ್ರೀಧರ ಷಡಕ್ಷರಿ
- ಶ್ರೀಮತಿ ಪ್ರಭಾವತಿ ವಿ. ಶೆಣೈ, ವಿಶ್ವನಾಥ ಶೆಣೈ ಗೌರವಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ – ನಾಗೇಶ ಭಂಡಾರಿ
- ವಿಜಯಕುಮಾರ್ ಮುದ್ರಾಡಿಯವರ ಅಪೇಕ್ಷೇಯಂತೆ ಅವರ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ‘ಯಕ್ಷಚೇತನ ಪ್ರಶಸ್ತಿ’ - ಹಿರಿಯ ಕಾರ್ಯಕರ್ತ ಯು. ದಾಮೋದರ್
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಕರ್ಣಾಟಕ ಬ್ಯಾಂಕ್ ಜಿ.ಎಂ. "ಕಲಾಂತರಂಗ -2015' ಸಂಚಿಕೆ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಪ್ರೊ| ಜಿ.ಆರ್. ರೈ ಬದುಕು -ಸಾಧನೆ ಕೃತಿ ಅನಾವರಣ ಮಾಡಲಾಯಿತು. ಭಟ್ಕಳ "ಯಕ್ಷರಕ್ಷೆ' ಅಧ್ಯಕ್ಷ ಡಾ| ಐ.ಆರ್. ಭಟ್ ಶುಭಾಶಂಸನೆಗೈಧರು. ಪ್ರೊ| ಜಿ.ಆರ್. ರೈ ಸಂಸ್ಮರಣಾ ಭಾಷಣ ಮಾಡಿದರು. ಸಾಕೇತ ಕಲಾವಿದರು ತಂಡದ ಕೆ.ಜೆ. ರಾಮ ರಾವ್ ಅವರು ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಎಸ್.ವಿ. ಭಟ್ ವಂದಿಸಿದರು.
ರೈತರು, ಕಲಾವಿದರನ್ನು ಮರೆಯದಿರಿ
ರೈತರು ಬೆಳೆದ ಫಸಲನ್ನು ನಾವು ಉಪಯೋಗಿಸುತ್ತೇವೆ. ಅನಂತರ ರೈತರನ್ನು ಮರೆತು ಬಿಡುತ್ತೇವೆ. ಅಂತೆಯೇ ಯಕ್ಷಗಾನದಿಂದ ಆನಂದ ಪಡೆಯುತ್ತೇವೆ. ಕಲಾವಿದರನ್ನು ಮರೆತು ಬಿಡುತ್ತೇವೆ. ಹೀಗಾಗಕೂಡದು. ಯಕ್ಷಗಾನ ಕಲಾವಿದರನ್ನು ಗುರುತಿಸುತ್ತಿರುವ ಯಕ್ಷಗಾನ ಕಲಾರಂಗದ ಸೇವೆ ಆದರ್ಶವಾದುದು. - ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ
ಕೃಪೆ :
udayavani
|
|
|